ಅಮೃತಮಯ ಗೋ ಕ್ಷೀರದ ಹದಿನೆಂಟು ಗುಣಗಳು -೦3



ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-03

ಅತ್ರ ಗವ್ಯಂ ತು ಜೀವನೀಯಂ…ರಕ್ತಪಿತ್ತಂ ಚ ನಾಶಯೇತ್ |*
(ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5/21,22,23)

ಆಯುರ್ವೇದದಲ್ಲಿ ಗೋಕ್ಷೀರದ ಒಟ್ಟು ಅಷ್ಟಾದಶ(ಹದಿನೆಂಟು) ಗುಣಗಳನ್ನು ವರ್ಣಿಸುತ್ತಾರೆ. 13 ಗುಣಗಳನ್ನು ನೋಡಿದೆವು, ಇಂದು 5 ಗುಣಗಳನ್ನು ನೋಡೋಣ.

14) ತೃಟ್:
ಕನ್ನಡದ ಬಾಯಾರಿಕೆಯನ್ನು ತೃಷೆ, ತೃಟ್, ತೃಷ್ಣಾ ಎಂದು ಕರೆಯುತ್ತೇವೆ.

ಸಂಚಿಕೆ 04. ಸಂಚಿಕೆ 02 ಗಾಗಿ ಇಲ್ಲಿ ಕ್ಲಿಕ್ಕಿಸಿ

ನೀರು ಕುಡಿದರೆ ಹೋಗುವ ಬಾಯರಿಕೆಗೆ ಔಷಧವೇಕೆ? ಎಂದರೆ- ಎರಡು ಉತ್ತರಗಳಿವೆ,
• ಒಂದು:- ನೀರನ್ನು ಹೊರತುಪಡಿಸಿ ಏನು ಕುಡಿದರೂ ಉಪಶಮನವಾಗದ ಬಾಯಾರಿಕೆ ಹಾಲು ಕುಡಿದರೆ ಉಪಶಮನ ಆಗುತ್ತದೆ. ಎಲ್ಲಿ ನೀರು ಸಿಗುತ್ತಿಲ್ಲವೋ ಅಲ್ಲಿ ಕ್ಷೀರವೇ ನೀರಿನ ಕೆಲಸ ನಿರ್ವಹಿಸುತ್ತದೆ, ಅಂದರೆ ಹಾಲಿನಲ್ಲಿ ಪ್ರತ್ಯೇಕಿಸಬಹುದಾದ ಹಾಲಿನ ಅಂಶ ಮತ್ತು ನೀರಿನ‌ ಅಂಶ ಸೇರಿಕೊಂಡಿವೆ. ಇದೇ ಕಾರಣಕ್ಕೆ ಹಂಸಪಕ್ಷಿ ಹಾಲಿನ ಅಂಶವನ್ನು ಕುಡಿದು ನೀರನ್ನು ಪಾತ್ರೆಯಲ್ಲೇ ಬಿಡುತ್ತದೆ, ಆ ನೀರು ಶುದ್ಧವೂ ಆರೋಗ್ಯಕರವೂ ಆಗಿರುತ್ತದೆ ಅದನ್ನು “ಹಂಸೋದಕ” ಎಂದು ಕರೆಯುತ್ತಾರೆ. ಶರತ್ ಋತುವಿನಲ್ಲಿ(ಅಕ್ಟೋಬರ್-ನವೆಂಬರ್) ಕೆರೆ, ಸರೋವರ, ನದಿಗಳಲ್ಲಿನ ನೀರು ಹಂಸೋದಕದಂತೆ ಶುದ್ಧ ಎಂದಿದ್ದಾರೆ ಆಚಾರ್ಯರು, ಈ ವಿಷಯವನ್ನು ಮುಂದೆ ನೋಡೋಣ.
• ಎರಡು- ತೃಷ್ಣಾ ಶಬ್ದ ‘ಶೋಷ'(ಬಾಯಿ ಒಣಗುವಿಕೆ) ಮತ್ತು ತೃಷೆ(ಜಲಾಭಿಲಾಷೆ/ಬಾಯಾರಿಕೆ) ಎರಡರಿಂದ ಕೂಡಿದೆ.
ಯಾರ ಬಾಯಿ ಒಣಗುತ್ತಿರುವುದೋ ಅದು ರೋಗ,
ಗೋಕ್ಷೀರವು ಬಾಯಿ ಒಣಗುವಿಕೆಯನ್ನೂ ಸಹ ಹೋಗಲಾಡಿಸುತ್ತದೆ, ಅಂದರೆ ಶರೀರದಲ್ಲಿ ಉಷ್ಣತೆಯ(ಕೇವಲ ಪಿತ್ತದ) ಕಾರಣದಿಂದ ಉಂಟಾದ ತೃಷ್ಣಾ ರೋಗಕ್ಕೆ ಗೋಕ್ಷೀರ ಸಿದ್ಧ ಔಷಧ. ಆದರೆ ಅಜೀರ್ಣದಿಂದ(ದೋಸೆ, ಪೂರಿ ತಿಂದಾಗಿನ ಬಾಯಾರಿಕೆ) ಉಂಟಾದ ತೃಷ್ಣಾ ರೋಗಕ್ಕೆ ಕ್ಷೀರ ಯೋಗ್ಯವಲ್ಲ.

15) ಕ್ಷುಧಃ :
ಕ್ಷುಧಾ ಎಂದರೆ ಹಸಿವು, ಗೋಕ್ಷೀರವು ಹಸಿವನ್ನು ನಿವಾರಿಸುತ್ತದೆ ಎಂದೇ ತಿಳಿಯಬೇಕು.

ಒಟ್ಟಾರೆ ಹಸಿವು-ಬಾಯಾರಿಕೆಗಳು ಮನುಷ್ಯನನ್ನು ನಿತ್ಯವೂ ಕಾಡುವ ಸಹಜ ವ್ಯಾಧಿಗಳು. ನೀರು-ಆಹಾರ ಅದಕ್ಕೆ ಔಷಧ, ಆದರೆ ಕೇವಲ ಗೋಕ್ಷೀರ ನೀರು-ಆಹಾರ ಎರಡರ ಕೆಲಸವನ್ನೂ ಮಾಡುವ ಒಂದು ಪರಿಪೂರ್ಣ ಪೋಷಕವಾಗಿದೆ. ಹಾಗಾಗಿ ವಿಷ ಅವಸ್ಥೆಗಳಲ್ಲಿ ಅಗ್ನಿಕ್ಷಯ, ಪಿತ್ತಪ್ರಕೋಪ, ಮನೋದೋಷ ಮುಂತಾದ ಅವಸ್ಥೆಗಳಲ್ಲಿ ಕೇವಲ ಗೋಕ್ಷೀರವೇ “ಆಹಾರ, ನೀರು ಮತ್ತು ಔಷಧ”ವಾಗಿ ಕೆಲಸ ಮಾಡುತ್ತದೆ.

16)ಜೀರ್ಣಜ್ವರಂ :
ದೀರ್ಘ ಕಾಲದಿಂದ ಇರುವ ಜ್ವರಕ್ಕೆ ಜೀರ್ಣಜ್ವರ ಎನ್ನುವರು, ಇಂದು ಎಲ್ಲವೂ ಜೀರ್ಣಜ್ವರವೇ!! ಏಕೆಂದರೆ ಜ್ವರ ಜೀರ್ಣ ಎನಿಸಿಕೊಳ್ಳಲು ಅದು ಬಹಳ ಕಾಲ ಇರಬೇಕು, ಇದರಿಂದ ಶರೀರದ ಧಾತುಗಳು ದುರ್ಬಲಗೊಂಡಿರಬೇಕು. ಇಂದು ಜ್ವರ ಬಂದರೆ ಸಾಕು ಅದರ ಲಕ್ಷಣವಾದ ಸಂತಾಪ-ಅರತಿ-ಗ್ಲಾನಿ ಮೂರೂ ಇರುತ್ತವೆ. ಗ್ಲಾನಿ(ಅತಿ ತೀವ್ರ ಆಯಾಸ) ಇದ್ದರೆ ಜೀರ್ಣ ಎಂದೇ ಪರಿಗಣಿಸಬೇಕು, ಇಂದು ಬಹಳಷ್ಟು ಜ್ವರಗಳು ವೈರಸ್ ಗಳಿಂದ ತುಂಬಿ ಧಾತುಕ್ಷಯದಿಂದ ಗ್ಲಾನಿಯನ್ನು ತರುತ್ತವೆ.
ಹಾಗಾಗಿ ಇಂದಿನ‌ ಎಲ್ಲಾ ಜ್ವರಗಳಲ್ಲೂ ಗೋಕ್ಷೀರ ಸೇವನಾಯೋಗ್ಯ. ಮಕ್ಕಳಲ್ಲಿ ಕಂಡುಬರುವ ಅಜೀರ್ಣ ಜ್ವರದಲ್ಲಿ ಕ್ಷೀರ ಯೋಗ್ಯವಲ್ಲ, ಅಲ್ಲಿ ವಾಂತಿಮಾಡಿಸುವುದೇ ಶ್ರೇಷ್ಠ, ಗಮನಿಸಿ- ಮಕ್ಕಳಲ್ಲಿ ವಾಂತಿಯಾದ ತಕ್ಷಣ ಜ್ವರ ನಿವಾರಣೆಯಾಗುತ್ತದೆ.

17)ಮೂತ್ರಕೃಚ್ಛ್ರಂ :
ಉರಿಮೂತ್ರ ಮತ್ತು ನೋವಿನಿಂದ ಆಗುವ ಮೂತ್ರಕ್ಕೆ ಗೋಕ್ಷೀರ ಯೋಗ್ಯ ಔಷಧ. ಮೂತ್ರವು ಸಹಜವಾಗಿ ಇರಬೇಕಾದ್ದು ಕ್ಷಾರೀಯವಾಗಿ(alkaline). ಆದರೆ ಇಂದಿನ ಹೆಚ್ಚಿನ ಜನರ ಮೂತ್ರ ಆಮ್ಲೀಯವಾಗಿರುವುದನ್ನು ಕಾಣುತ್ತೇವೆ.

ಒಂದೊಮ್ಮೆ ಮೂತ್ರದ pH6ಕ್ಕಿಂತ ಕಡಿಮೆ ಇದ್ದರೆ ಮೂತ್ರ ಆಮ್ಲೀಯವಾಗಿ ಉರಿ ಮತ್ತು ನೋವನ್ನು ಕೊಡುತ್ತದೆ. ಈ ಸಂದರ್ಭದಲ್ಲಿ ಹೊಟ್ಟೆಬಿರಿಯುವಂತೆ ನೀರು ಕುಡಿಯುವ ಬದಲು, ಗೋಕ್ಷೀರ ಸೇವನೆ ಮಾಡಿದರೆ ಶರೀರದ ಜಲಾಂಶವನ್ನು ತುಂಬುತ್ತದೆ. ರಕ್ತ ಮತ್ತು ಮೂತ್ರದಲ್ಲಿನ‌ ಆಮ್ಲೀಯತೆಯನ್ನು ತಟಸ್ಥಗೊಳಿಸುತ್ತದೆ(Neutralize) ಆಗ ಮೂತ್ರದ ಉರಿ ನಿವಾರಣೆಯಾಗುತ್ತದೆ.

• ನೆನಪಿಡಿ:- ಎಲ್ಲ ಮೂತ್ರ ಉರಿಗಳೂ UTI(urinary tract infection) ಅಲ್ಲ!
ಅದು ಕೇವಲ ಹೊರಗಿನಿಂದಲೇ ಬರುವಂತದ್ದಲ್ಲ!! ಕೇವಲ ಆ್ಯಂಟಿಬಯಾಟಿಕ್ ನಿಂದ ನಿವಾರಣೆ ಅಸಾಧ್ಯ!!!!

18)ರಕ್ತಪಿತ್ತ ಹರಂ :
ಅತೀ ಮುಖ್ಯ ಅಂಶ ಇದು.‌ ಇಂದು ಬಹುತೇಕ ಮನುಷ್ಯರ ಜೀವನವನ್ನೇ ನರಕ ಸದೃಶಗೊಳಿಸುವ ಕಾಯಿಲೆ ಎಂದರೆ ರಕ್ತಪಿತ್ತ.
ಇದೊಂದು ಬಹುದೊಡ್ಡ, ಚರ್ಚಿಸುವ ವಿಷಯ- ಇಂದಿನ ಬಿ.ಪಿ, ಹೃದ್ರೋಗ, ಕಿಡ್ನಿ ಸಮಸ್ಯೆ, ಲಕ್ವಾ/ಪಾರ್ಶ್ವವಾಯು, ರೆಟಿನಾ ಹಾಳಾಗುವಿಕೆ, ವೆರಿಕೋಸ್ ವೇನ್, ವೆರಿಕೋಸೀಲ್, ಡೀಪ್ ವೇನ್ ಥ್ರೋಂಬೋಸಿಸ್, ಪೆರಿಫೆರಲ್ ವ್ಯಾಸ್ಕುಲಾರ್ ಡಿಸೀಜ್, ಗ್ಯಾಂಗ್ರೀನ್, ಯಕೃತ್ ತೊಂದರೆ, ರಕ್ತಕ್ಷೀಣತೆ, ಕೊನೆಗೆ, ರಕ್ತದ ಕ್ಯಾನ್ಸರ್ ಮುಂತಾದ ಅನೇಕ ಪ್ರತ್ಯೇಕ ರೋಗಗಳು ರಕ್ತಪಿತ್ತ ಎಂಬ ಈ ರೋಗದ ವಿಧಗಳಷ್ಟೇ…… ಇಷ್ಟೆಲ್ಲಾ ಕಾಯಿಲೆಗಳನ್ನು ಗೋಕ್ಷೀರವೊಂದೇ ತಡೆಯುತ್ತದೆ ಎಂದರೆ, ಭಾರತೀಯರು ಮಾತೆ ಎಂದು ಪೂಜಿಸುವ ಗೋವು ವಿಶ್ವಮಾತೆ ಕೂಡಾ ಹೌದು

ತಾಯಿ ಇಲ್ಲದ ಮಗುವಿಗೆ ಧಾತ್ರಿ(ಪರ್ಯಾಯ ಮಾತೆ) ನಮ್ಮ ಗೋಮಾತೆ,
ಹಾಗಾಗಿ, ಅಂತಹ ಸಂದರ್ಭದಲ್ಲಿ ಗೋಕ್ಷೀರವೇ ಸರ್ವಶ್ರೇಷ್ಠ ಎಂದಿದ್ದಾರೆ ಆಚಾರ್ಯರು
.
.
.
.
ಆದರೆ!!!!
ನೆನಪಿರಲಿ: ಹತ್ತು ಇಪ್ಪತ್ತು ಲೀಟರ್ ಹಾಲುಕೊಡುವ ಹೈಬ್ರೀಡ್ ತಳಿಯ ಪ್ರಾಣಿಯ ಹಾಲಿನಲ್ಲಿ ಈ ಯಾವಗುಣಗಳೂ ಇರುವುದಿಲ್ಲ!!!!

ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
ಸ್ವಾಸ್ಥ್ಯ ಸರ್ವರದ್ದೂ ಆಗಲಿ

ಸಂಗ್ರಹ: ಸಂಗೀತ ಪ್ರಸನ್ನ ಹೆಗಡೆ

One thought on “ಅಮೃತಮಯ ಗೋ ಕ್ಷೀರದ ಹದಿನೆಂಟು ಗುಣಗಳು -೦3

Leave a comment